ಬೆಳಗಾವಿ:
ಫೆಬ್ರವರಿ–ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ, ಬಡವರ ಹಣವನ್ನು ಲೂಟಿ ಮಾಡಿದೆ ಎಂಬ ವಿರೋಧ ಪಕ್ಷ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್,
“ರಾಜ್ಯದಲ್ಲಿ ನಿಜವಾದ ಕಲೆಕ್ಷನ್ ಕಿಂಗ್ ಯಾರಾದರೂ ಇದ್ದರೆ ಅದು ಬಿ.ವೈ. ವಿಜಯೇಂದ್ರ. ಅವರ ಕಲೆಕ್ಷನ್ ಬಗ್ಗೆ ಬಿಚ್ಚಿಡಬೇಕಾ?” ಎಂದು ಪ್ರಶ್ನಿಸಿದರು. ವಿಜಯೇಂದ್ರ ಅವರಿಗೆ ರಾಜಕೀಯ ಅನುಭವದ ಕೊರತೆಯಿದೆ ಎಂದು ಟೀಕಿಸಿದ ಅವರು, “ತಂದೆ ಯಡಿಯೂರಪ್ಪ ಅವರ ಹೆಸರನ್ನು ಕೆಡಿಸಿದ್ದು ಕೂಡ ವಿಜಯೇಂದ್ರನೇ” ಎಂದು ಕಿಡಿಕಾರಿದರು.
ವಿರೋಧ ಪಕ್ಷದ ಆರೋಪಗಳಿಗೆ ಮಿತಿ ಇರಬೇಕು ಎಂದು ಹೇಳಿದ ಡಿ.ಕೆ.ಶಿವಕುಮಾರ್,
“ರಾಜ್ಯದ ಯಾವ ಖಜಾನೆ ಖಾಲಿಯಾಗಿದೆ? ಈ ಬಗ್ಗೆ ಸದನಕ್ಕೆ ಬಂದು ಮಾತನಾಡಲಿ. ಹೊರಗೆ ಹೇಳಿಕೆ ನೀಡುವುದಲ್ಲ, ಧೈರ್ಯ ಇದ್ದರೆ ಸದನದಲ್ಲಿ ಪ್ರಶ್ನೆ ಮಾಡಲಿ” ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಸದನದಲ್ಲೇ ಉತ್ತರ ನೀಡಲಾಗುವುದು
ಇಂದು ಹಾಗೂ ನಾಳೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವರು ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಿವರವಾಗಿ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ ಅವರು,
“ಮಹದಾಯಿ ಹಾಗೂ ನೀರಾವರಿ ಅಭಿವೃದ್ಧಿ ವಿಷಯದಲ್ಲಿಯೂ ನಾನೇ ಉತ್ತರ ನೀಡುತ್ತೇನೆ” ಎಂದರು.
ರೈತರ ಪರ ಸರ್ಕಾರ – ಡಿಕೆಶಿ ಸ್ಪಷ್ಟನೆ
ರಾಜ್ಯ ಸರ್ಕಾರ ರೈತರ ಹಿತ ಕಾಯುತ್ತಿದೆ ಎಂದು ಪುನರುಚ್ಚರಿಸಿದ ಡಿ.ಕೆ.ಶಿವಕುಮಾರ್,
“ಕಬ್ಬು ಹಾಗೂ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಲಾಗಿದೆ. ಇದರಿಂದ ಸರ್ಕಾರಕ್ಕೂ, ಸಕ್ಕರೆ ಕಾರ್ಖಾನೆಗಳಿಗೂ ದೊಡ್ಡ ಆರ್ಥಿಕ ಹೊರೆಯಾಗಿದೆ. ಇದನ್ನು ರೈತರು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದ ಉಲ್ಲೇಖ
ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಈಗಾಗಲೇ ಕೈಬಿಡಲಾಗಿದೆ ಎಂದು ಹೇಳಿದ ಅವರು,
“ಒಂದು ಎಫ್ಐಆರ್ ಮಾತ್ರ ಬಾಕಿ ಇದೆ. ಅದನ್ನೂ ಹಿಂಪಡೆದರೆ ಉತ್ತಮ” ಎಂದರು.
ಗೃಹಲಕ್ಷ್ಮಿ ಯೋಜನೆ ಕುರಿತು ಸರ್ಕಾರದಿಂದ ಯಾವುದೇ ತಪ್ಪು ಮಾಹಿತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಡಿಕೆಶಿ,
“ನ್ಯಾಷನಲ್ ಹೆರಾಲ್ಡ್ ವಿಚಾರದಲ್ಲಿ ನಾವು ಧ್ವನಿ ಎತ್ತುತ್ತಿರುವುದರಿಂದ ಬಿಜೆಪಿಯವರು ಮುಖ್ಯ ವಿಚಾರಗಳಿಂದ ಜನರ ಗಮನ ತಪ್ಪಿಸಲು ಗೃಹಲಕ್ಷ್ಮಿ ವಿಷಯವನ್ನು ಎತ್ತುತ್ತಿದ್ದಾರೆ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
