ರಾಜಕೀಯ

‘ಅಧಿಕಾರದ ಮದದಲ್ಲಿ ದರ್ಪ’ – ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಿಡಿಕಾರಿಕೆ

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಜಾತ್ಯಾತೀತ ಜನತಾದಳ (ಜೆಡಿಎಸ್) ತೀವ್ರ ವಾಗ್ದಾಳಿ ನಡೆಸಿದ್ದು, ಇಂತಹ ವರ್ತನೆ ತೋರುವ ವ್ಯಕ್ತಿ ಜನಪ್ರತಿನಿಧಿಯಾಗಿ ಮುಂದುವರಿಯಲು ಅರ್ಹನಲ್ಲ ಎಂದು ಕಿಡಿಕಾರಿದೆ. ಕೂಡಲೇ ಡಿಕೆ ಶಿವಕುಮಾರ್ ಅವರ ರಾಜೀನಾಮೆ ಪಡೆಯಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ ಶನಿವಾರ ಆಯೋಜಿಸಿದ್ದ ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ–2025 ಕುರಿತ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಈ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿರುವ ಜೆಡಿಎಸ್, ಡಿಕೆಶಿಯವರ ಮಾತುಗಳು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿದೆ.

ಈ ಕುರಿತು ಸರಣಿ ಟ್ವೀಟ್‌ಗಳ ಮೂಲಕ ಪ್ರತಿಕ್ರಿಯಿಸಿರುವ ಜೆಡಿಎಸ್,
“ಡಿಕೆ ಶಿವಕುಮಾರ್ ಅವರೇ, ನೀವು ಶಾಸಕರಾದರೂ ಏನು, ಸಚಿವರಾದರೂ ಏನು, ಡಿಸಿಎಂ ಆದರೂ ಏನು? ನೀನೊಬ್ಬ ಮನುಷ್ಯ ಅಷ್ಟೇ. ಜನರಿಂದ ಆಯ್ಕೆಯಾದ ಪ್ರತಿನಿಧಿಯಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು ನಿಮ್ಮ ಕರ್ತವ್ಯ. ಅದನ್ನು ಬಿಟ್ಟು ಪ್ರಶ್ನೆ ಕೇಳಿದವರಿಗೆ ಧಮ್ಕಿ, ಬೆದರಿಕೆ ಹಾಕುವುದು ಸಂವಿಧಾನಾತ್ಮಕ ಅಪರಾಧ. ನಾವು ಇನ್ನೂ 80ರ ದಶಕದಲ್ಲಿ ಬದುಕುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದೆ.

ಮುಂದುವರೆದು ಜೆಡಿಎಸ್,
“ನಿಮ್ಮ ಬಳಿ ಹಣ ಇದ್ದರೂ ಅದು ‘ನಾಯಿ ಮೊಲೆ ಹಾಲಿನಂತೆ’ – ಯಾರಿಗೂ ಪ್ರಯೋಜನವಿಲ್ಲ. ಅಧಿಕಾರದ ಮದ, ದರ್ಪ ಮತ್ತು ದಬ್ಬಾಳಿಕೆ ನಿಮ್ಮ ನೆತ್ತಿಗೇರಿದೆ. ಕೊತ್ವಾಲ್ ಶಿಷ್ಯನ ರೌಡಿಸಂ ಹಾಗೂ ಗೂಂಡಾ ಪ್ರವೃತ್ತಿಗೆ ಕಡಿವಾಣ ಹಾಕದಿದ್ದರೆ ಅದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿಯಾಗಿದೆ. ಇಂತಹವರು ಜನಪ್ರತಿನಿಧಿಯಾಗಿ ಮುಂದುವರಿಯಲು ನಾಲಾಯಕ್” ಎಂದು ಕಿಡಿಕಾರಿದೆ.

ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಹುಲ್ ಗಾಂಧಿಯವರನ್ನೂ ಉಲ್ಲೇಖಿಸಿರುವ ಜೆಡಿಎಸ್,
“ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡುವ ಕಾಂಗ್ರೆಸ್ ಮೊದಲು ಡಿಕೆಶಿಯಂತಹ ರೌಡಿ ರಾಜಕಾರಣಿಯ ರಾಜೀನಾಮೆ ಪಡೆದು, ನಂತರ ದೇಶದ ಜನತೆಗೆ ಸಂವಿಧಾನದ ಪಾಠ ಮಾಡಲಿ” ಎಂದು ವ್ಯಂಗ್ಯವಾಡಿದೆ.

ಮತ್ತೊಂದು ಟ್ವೀಟ್‌ನಲ್ಲಿ,
“ಮಿಸ್ಟರ್ ಧಮ್ಕಿ ಡಿಕೆಶಿ ಅವರೇ, ನಿಮ್ಮ ಹಿನ್ನೆಲೆ ಏನು ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ. ಉಪಮುಖ್ಯಮಂತ್ರಿಯಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ವೇದಿಕೆಯಲ್ಲೇ ನಾಗರಿಕರನ್ನು ಬೀದಿರೌಡಿಯಂತೆ ಹೆದರಿಸುವುದು ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ. ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆ. ಜನಪ್ರತಿನಿಧಿಯನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಸಂವಿಧಾನ ಪುಸ್ತಕ ಹಿಡಿದರೆ ಮಾತ್ರ ಸಂವಿಧಾನ ರಕ್ಷಿಸಿದಂತಾಗುವುದಿಲ್ಲ. ನಿಮ್ಮ ಅಹಂಕಾರಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ” ಎಂದು ಜೆಡಿಎಸ್ ಎಚ್ಚರಿಸಿದೆ.

ಡಿಕೆ ಶಿವಕುಮಾರ್ ಹೇಳಿದ್ದೇನು?

ಸರ್ಕಾರ ತನ್ನ ಹಲವಾರು ಭರವಸೆಗಳನ್ನು ಈಡೇರಿಸಿದ್ದರೂ ಅಪಾರ್ಟ್‌ಮೆಂಟ್ ನಿವಾಸಿಗಳು ಪರಂಪರೆಯಿಂದಲೇ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿಲ್ಲ ಎಂಬುದನ್ನು ಉಲ್ಲೇಖಿಸಿದ್ದ ಡಿಕೆ ಶಿವಕುಮಾರ್, ಮುಂಬರುವ ಜಿಬಿಎ (GBA) ಚುನಾವಣೆಯನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಹೆದರಿಸುವ ರೀತಿಯಲ್ಲಿ ಪತ್ರ ಬರೆದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

“ನಾನು ಮನೆ ಖರೀದಿದಾರರ ಪರವಾಗಿ ನಿಲ್ಲುವ ಕಾರಣಕ್ಕೆ ಈ ಸಭೆಯನ್ನು ಕರೆದಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತೇನೆ. ಅದೇ ಸಮಯದಲ್ಲಿ ಮುಂಬರುವ ಜಿಬಿಎ ಚುನಾವಣೆಯಲ್ಲಿ ನಿಮ್ಮ ಬೆಂಬಲವನ್ನೂ ನಿರೀಕ್ಷಿಸುತ್ತೇನೆ. ನೀವು ನನ್ನನ್ನು ನಿರಾಶೆಗೊಳಿಸುವುದಿಲ್ಲ ಎಂಬ ವಿಶ್ವಾಸ ನನಗಿದೆ” ಎಂದು ಡಿಸಿಎಂ ಸೂಚ್ಯವಾಗಿ ಹೇಳಿದ್ದಾರೆ.

ಇದೇ ವೇಳೆ ಕಿರಣ್ ಹೆಬ್ಬಾರ್ ಎಂಬವರು ಸರ್ಕಾರಕ್ಕೆ ಬರೆದ ಪತ್ರದ ಧಾಟಿಯನ್ನು ಟೀಕಿಸಿದ ಡಿಕೆ ಶಿವಕುಮಾರ್,
“ಪ್ರಧಾನಿ ಹಾಗೂ ಗೃಹ ಸಚಿವರಿಗೂ ಹೆದರದೆ ಜೈಲಿಗೆ ಹೋಗಿ ಬಂದವನು ನಾನು. ಅಂತಹವನಿಗೆ ಕಿರಣ್ ಹೆಬ್ಬಾರ್ ಅವರಂತಹವರ ಗೊಡ್ಡು ಬೆದರಿಕೆಗಳು ಯಾವ ಭಯವನ್ನೂ ಉಂಟುಮಾಡುವುದಿಲ್ಲ. ಪ್ರೀತಿಯಿಂದ ಮಾತನಾಡಿಸಿದರೆ ಪ್ರೀತಿಯಿಂದಲೇ ಉತ್ತರಿಸುತ್ತೇನೆ” ಎಂದು ಕಠಿಣವಾಗಿ ಪ್ರತಿಕ್ರಿಯಿಸಿದ್ದರು.

ಈ ಹೇಳಿಕೆಗಳೇ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರ ತೀವ್ರಗೊಂಡಿದೆ.

Related posts

ಎರಡನೇ ಮಹತ್ವದ ಭೇಟಿ! ಡಿ.ಕೆ. ಶಿವಕುಮಾರ್ ಬೆಂಬಲಕ್ಕಾಗಿ ಸತೀಶ್ ಜಾರಕಿಹೊಳಿಯನ್ನು ಭೇಟಿ ಮಾಡಿದ್ರಾ? ರಾಜಕೀಯ ವಲಯದಲ್ಲಿ ಬೇಡಿಕೆಯ ಚರ್ಚೆ!

digitalbharathi24@gmail.com

ನಾಲ್ವರು–ಐದು ಮಂದಿ ಮಾತ್ರಕ್ಕೆ ತಿಳಿದ ರಹಸ್ಯ ಒಪ್ಪಂದವೇ ಅಧಿಕಾರ ಹಂಚಿಕೆ!” – ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

admin@kpnnews.com

“ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕೆಂಬುದು ಜನಮನದ ಬೇಡಿಕೆ”: ನಿರ್ಮಲಾನಂದನಾಥ ಸ್ವಾಮೀಜಿ

admin@kpnnews.com
Latest news
ಬೆಳಗಾವಿ ಚಳಿಗಾಲದ ಅಧಿವೇಶನ: 10 ದಿನಗಳಲ್ಲಿ 23 ವಿಧೇಯಕಗಳಿಗೆ ಅಂಗೀಕಾರ ರಾಜ್ಯಸಭೆಯಲ್ಲಿ ಮಧ್ಯರಾತ್ರಿ ಜಿ ರಾಮ್‌ ಜಿ ಮಸೂದೆ ಅಂಗೀಕಾರ; ವಿಪಕ್ಷಗಳ ತೀವ್ರ ಆಕ್ರೋಶ ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ; ಶುಭ್‌ಮನ್ ಗಿಲ್ ಹೊರಗೆ, ಇಶಾನ್ ಕಿಶಾನ್‌ಗೆ ಕಂಬ್ಯಾಕ್ ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಮುಂದುವರಿದ ಶೀತದಲೆಯ ಅಬ್ಬರ; 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, 10 ಜಿಲ್ಲೆಗಳಿಗೆ... ಬೇಡಿಕೆ ಈಡೇರಿದೆ, ನನ್ನ–ಸಿಎಂ ನಡುವೆ ಒಪ್ಪಂದವಾಗಿದೆ; ಹೈಕಮಾಂಡ್ ಬೆಂಬಲದಿಂದಲೇ ಅವರು ಮುಖ್ಯಮಂತ್ರಿ: ಡಿ.ಕೆ. ಶಿವಕುಮಾರ... ಬೇರೆ ಧರ್ಮದವನನ್ನು ಮದುವೆಯಾದರೆ ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಬೆಳಗಾವಿ ಚಳಿಗಾಲ ಅಧಿವೇಶನ: ಉತ್ತರ–ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕೇಂದ್ರದ ನೆರವು ಕೋರಿ ನಿರ್ಣಯಗಳಿಗೆ ವಿಧಾನಸಭೆಯ ಸರ... ಮೋದಿ ಓಮನ್ ಭೇಟಿ… ಪಾಕ್–ಚೀನಾ ಏಕೆ ಪತರಗುಟ್ಟಿವೆ? ಹಿಜಾಬ್ ವಿಚಾರ ತೀವ್ರಗೊಂಡ ಬೆನ್ನಲ್ಲೇ ಸಿಎಂ ನಿತೀಶ್ ಕುಮಾರ್ ವಿರುದ್ಧ ದೂರು: ಬೆದರಿಕೆ ಎಚ್ಚರಿಕೆಯಿಂದ ಭದ್ರತೆ ಮತ್ತಷ್... ‘ಕೈ’ ಕಮಾಂಡ್‌ ತೃಪ್ತಿಗೆ ರಾಜ್ಯದ ಖಜಾನೆ ಖಾಲಿ ಮಾಡುತ್ತಿದ್ದಾರೆ’: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ...