ನವದೆಹಲಿ: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ನೀಟ್-ಯುಜಿ (NEET-UG) 2026 ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪರೀಕ್ಷಾ ಪಾವಿತ್ರ್ಯತೆ ಕಾಪಾಡುವಲ್ಲಿ ವಿಫಲವಾಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿರುವ ಅವರು, ಈ ಬೃಹತ್ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ಮೌನ’ವನ್ನು ಕಟುವಾಗಿ ಪ್ರಶ್ನಿಸಿದ್ದಾರೆ.
‘ಮಿಸ್ಟರ್ ಮೋದಿ… ದೇಶಕ್ಕೆ ಉತ್ತರಿಸಿ’ ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಪದೇ ಪದೇ ಪತ್ರಿಕೆ ಸೋರಿಕೆ ಪ್ರಕರಣಗಳು ನಡೆಯುತ್ತಿದ್ದರೂ ಯಾರೂ ಏಕೆ ಹೊಣೆಗಾರಿಕೆ ತೆಗೆದುಕೊಳ್ಳುತ್ತಿಲ್ಲ? ಮಿಸ್ಟರ್ ಮೋದಿ, ದೇಶವು ನಿಮ್ಮನ್ನು ಕೆಲವು ಪ್ರಶ್ನೆಗಳನ್ನು ಕೇಳುತ್ತಿದೆ, ಉತ್ತರಿಸಿ!” ಎಂದು ಸವಾಲು ಹಾಕಿದ್ದಾರೆ.
-
ಪತ್ರಿಕೆ ಸೋರಿಕೆಗಳು ಪದೇ ಪದೇ ಏಕೆ ಸಂಭವಿಸುತ್ತಿವೆ?
-
ಈ ಪರೀಕ್ಷಾ ಪೇಪರ್ ಸೋರಿಕೆ ಬಗ್ಗೆ ನೀವು ಪ್ರತಿ ಬಾರಿಯೂ ಏಕೆ ಮೌನವಾಗಿದ್ದೀರಿ?
-
ನಿರಂತರವಾಗಿ ವಿಫಲರಾಗುತ್ತಿರುವ ಶಿಕ್ಷಣ ಸಚಿವರನ್ನು ನೀವು ಏಕೆ ವಜಾಗೊಳಿಸುತ್ತಿಲ್ಲ?
2024 ಮತ್ತು 2026ರ ನೀಟ್: ಹಳೆಯ ನಾಟಕವೇ ರಿಪೀಟ್! 2024 ಮತ್ತು 2026 ರ ನೀಟ್ ವಿವಾದಗಳನ್ನು ಸರ್ಕಾರ ನಿಭಾಯಿಸುತ್ತಿರುವ ರೀತಿಯನ್ನು ಲೇವಡಿ ಮಾಡಿರುವ ರಾಹುಲ್, ‘ಪತ್ರಿಕೆ ಸೋರಿಕೆ, ತನಿಖೆ ಮತ್ತು ಸಮಿತಿಗಳ ರಚನೆಯ ಅದೇ ಹಳೆಯ ಚಕ್ರ ಮತ್ತೆ ಪುನರಾವರ್ತನೆಯಾಗುತ್ತಿದೆ’ ಎಂದು ಟೀಕಿಸಿದ್ದಾರೆ.
-
ನೀಟ್ 2024: ಪತ್ರಿಕೆ ಸೋರಿಕೆಯಾಯಿತು ➔ ಪರೀಕ್ಷೆ ರದ್ದುಗೊಳಿಸಲಿಲ್ಲ ➔ ಸಚಿವರು ರಾಜೀನಾಮೆ ನೀಡಲಿಲ್ಲ ➔ ಸಿಬಿಐ ತನಿಖೆ ಆರಂಭವಾಯಿತು ➔ ಒಂದು ಸಮಿತಿಯನ್ನು ರಚಿಸಲಾಯಿತು.
-
ನೀಟ್ 2026: ಪತ್ರಿಕೆ ಸೋರಿಕೆಯಾಯಿತು ➔ ಪರೀಕ್ಷೆ ರದ್ದುಗೊಳಿಸಲಾಯಿತು ➔ ಸಚಿವರು ಇನ್ನೂ ರಾಜೀನಾಮೆ ನೀಡಿಲ್ಲ ➔ ಸಿಬಿಐ ಮತ್ತೆ ತನಿಖೆ ನಡೆಸುತ್ತಿದೆ ➔ ಮತ್ತೊಂದು ಸಮಿತಿಯನ್ನು ರಚಿಸಲಾಗುತ್ತದೆ.
‘ಇದು ಬಿಜೆಪಿ, ಆರ್ಎಸ್ಎಸ್ನ ಹಣ ಮಾಡುವ ಜಾಲ’ ಮೋದಿ ಸರ್ಕಾರವು ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಪರೀಕ್ಷೆಗೆ ಎರಡು ದಿನ ಮುಂಚಿತವಾಗಿಯೇ ಪ್ರಶ್ನೆ ಪತ್ರಿಕೆಯನ್ನು ವಾಟ್ಸಾಪ್ನಲ್ಲಿ ಹರಿಬಿಡಲಾಗಿತ್ತು ಎಂಬ ಗಂಭೀರ ಆರೋಪ ಮಾಡಿದ್ದಾರೆ. “ಬಿಜೆಪಿ, ಆರ್ಎಸ್ಎಸ್ ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧಿಕಾರದಲ್ಲಿರುವ ವ್ಯಕ್ತಿಗಳು ಶಾಮೀಲಾಗಿರುವ ಭ್ರಷ್ಟ ‘ಹಣ ಮಾಡುವ ಜಾಲ’ (Money making nexus) ಇದರ ಹಿಂದೆ ಕೆಲಸ ಮಾಡುತ್ತಿದೆ,” ಎಂದು ಅವರು ಕಿಡಿಕಾರಿದ್ದಾರೆ.
ಏನಿದು ನೀಟ್ 2026 ಸೋರಿಕೆ ಪ್ರಕರಣ? ನೀಟ್-ಯುಜಿ 2026 ರ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (CBI) ಚುರುಕುಗೊಳಿಸಿದೆ.
-
ಎನ್ಟಿಎ (NTA) ಒಳಗಿನಿಂದಲೇ ಲೀಕ್: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಒಳಗಿನಿಂದಲೇ, ಪತ್ರಿಕೆ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಸದಸ್ಯರ ಮೂಲಕವೇ ಗೌಪ್ಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.
-
ಉಪನ್ಯಾಸಕರ ಬಂಧನ: ಮೇ 3 ರ ಪರೀಕ್ಷೆಗೆ ಮುನ್ನ ಪ್ರಶ್ನೆಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ನಿವೃತ್ತ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿ ಮತ್ತು ಪುಣೆ ಮೂಲದ ಸಸ್ಯಶಾಸ್ತ್ರ ಶಿಕ್ಷಕಿ ಮನಿಷಾ ಗುರುನಾಥ್ ಮಾಂಧರೆ ಎಂಬುವವರನ್ನು ಬಂಧಿಸಲಾಗಿದೆ.
-
ಭಾರಿ ಡೀಲ್: ಆರೋಪಿಗಳು ಆಯ್ದ ವಿದ್ಯಾರ್ಥಿಗಳಿಗೆ ಭಾರಿ ಹಣದ ಬದಲಾಗಿ ಪ್ರಶ್ನೆಗಳು ಮತ್ತು ಉತ್ತರಗಳನ್ನು ನೀಡಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ 5 ರಾಜ್ಯಗಳಿಂದ ಒಟ್ಟು 9 ಜನರನ್ನು ಬಂಧಿಸಲಾಗಿದೆ. ಲ್ಯಾಪ್ಟಾಪ್ಗಳು, ಬ್ಯಾಂಕ್ ದಾಖಲೆಗಳು ಮತ್ತು ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.
